Monday, 5 September 2016

ಏನಾದರೂ ಆಗು, ಮೊದಲು ಮಾನವನಾಗು -

{ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಂದು ಜಾತಿ, ಭಾಷೆ, ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ಜನರು ಪರಸ್ಪರರನ್ನು ದ್ವೇಷಿಸುತ್ತಿದ್ದಾರೆ, ಆ ದ್ವೇಷ ದಂಗೆಗಳಾಗಿ ಬದಲಾಗುತ್ತಿವೆ. ಯಾವುದೇ ರೀತಿಯ ಗಲಭೆಗಳಲ್ಲಿ ಹೆಚ್ಚು ಬಲಿಯಾಗುವುದು, ಹೆಣ್ಣುಮಕ್ಕಳೇ. ಹಾಗಾಗಿ ಎಲ್ಲಾ ರೀತಿಯ ವಿಚ್ಛಿದ್ರಕಾರಿ ಶಕ್ತಿಗಳನ್ನು ವಿರೋಧಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಪ್ರೀತಿಯಿಂದ ಮಾತ್ರ ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಸಾಧ್ಯ. ಅಧಿಕಾರದ ಲಾಲಸೆಯಿಂದ, ಕೆಲವರು ಜನರಲ್ಲಿ ದ್ವೇಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಆ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಬೆಳೆದು ನಮ್ಮೆಲ್ಲರನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಅದನ್ನು ಬುಡಸಮೇತ ಕಿತ್ತೊಗೆಯೋಣ. ಈ ಅಂಕಣದಲ್ಲಿ ಸಾಮಾರಸ್ಯದ ಬಗ್ಗೆ, ನಾವು ನೀವೆ¯್ಲರೂ ಮಹಾನರೆಂದು ಪರಿಗಣಿಸುವ ವ್ಯಕ್ತಿಗಳ ಬರಹಗಳನ್ನು ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಪ್ರಸಿದ್ಧ ಬರಹಗಾರರಾದ ಸಾಲಿ ರಾಮಚಂದ್ರರಾಯರ ಕವನಗಳನ್ನು ಕೊಡುತ್ತಿದ್ದೇವೆ.}

ರಕ್ತ ರುಚಿ 
ಶ್ವಾಪದಶೆ – ರಕ್ತ ರುಚಿ ನಿನಗಲ್ಲಾ
ಕಾಪಿಡುತೆ ಬಾಳು, ಕೊಲಬೇಡ, ಮನುಜಾ
ದಯೆಯ ಬೀಜವನು ನಿನ್ನೆದೆಯೊಳಿರಿಸಿದನು ಚಿ –
ನ್ಮಯನು; ಮೊಳೆಯಿಸಿ ನೀನು ಬೆಳೆಯಿಸದನು||
ಭಯಗೊಳಿಸಿ ಬದುಕುವನ ಬದುಕಿನಲಿ ಹುರುಳಿಲ್ಲ,
ಭಯದ ಸಂಗಡಿಗನಿಗೆ ಶಾಂತಿಯಿಲ್ಲಾ!
ಎದೆಮುಗುಳು ಪರಿಪಕ್ವವಾಗಿ ಪರಿಮಳದೆ ತುಂ
ಬುದೊಡೆ ಜೀವನಕಹುದು ಸೌಭಾಗ್ಯವು||
ಎದೆಮುಗುಳಿಗರಳಲಾಸ್ಪದವಿಲ್ಲ ದುರ್ಭಾವ
ವದರೊಳವಿತಿದ್ದವನು ಹೀರುತಿರಲು.
ಒಂದು ಮೆಟ್ಟಿಲು ಮುಂದೆ, ಮಾನವಾ, ಪಶುಜಾತಿ
ಯಿಂದೆ ನೀನಿರುವೆಯೆಂಬುದನು ಮರೆತು||
ಹಿಂದೆ ಸರಿದಾವ ಹುಳುಗಳ ಜೊತೆಗೆ ಬದುಕ
ಬೇಕೆಂದಿರುವೆ? ನರನು ಮುನ್ನಡೆಯಬೇಕು.
ಎಲ್ಲಿರುವುದು ಮದ್ದು?
ಎಲ್ಲಿರುವುದಯ್ಯ ಜಗದೊಳಗೆ ಮದ್ದು
ಬೆಲ್ಲವನು ಬೇವಾಗಿಸುವ ಬೇನೆಗೆ?
ಒಳ್ಳಿದರ ನುಡಿಗಳಿಗಪಾರ್ಥವನು ಹೇಳಿ ಹೆ
ಮ್ಮುಳ್ಳುಗಳನಿರಿಸುತ್ತೆ ಸತ್ಪಥದೊಳು||
ಸುಳ್ಳುಗಳ ಜಾಲವನು ಹರಹುತ್ತ ಜನಹಿತಕೆ –
ಕೊಳ್ಳಿಯಿಕ್ಕುವ ಮದಾಂಧರ ಬೇನೆಗೆ
ಮರಣ ಶಯ್ಯೆಯೊಳಿರುವ ಧರ್ಮವನು ಕಾಯಲವ
ತರಿಸಿದ ಮಹಾಜನರು ತಾವೆನ್ನುತೆ||
ಪರಿಪರಿಯ ಹಿಂಸೆಗಳನೆಸಗುತ್ತೆ ಹೆರರನೆ
ತ್ತರನು ಹೀರುವ ದುರಾತ್ಮರ ಬೇನೆಗೆ
ಉರಿವೆಂಕೆಯನು ಸೆರಗಿನೊಳು ಒಯ್ದು ಸೌಖ್ಯದಿಂ
ದಿರಬಯಸುವಾತ್ಮವಂಚಕರ ತೆರದೆ||
ಮರೆಮಾಚಿ ವಾಸ್ತವವನಿರದ ಸೌಜನ್ಯವನು
ಮೆರೆಯಿಸಲು ಹವಣಿಸುವರಿರ್ಬೇನೆಗೆ.

No comments:

Post a Comment